ಶುಕ್ರವಾರ, ನವೆಂಬರ್ 4, 2016

ಗೋವಿಂದರಾಜ ಬೈಚಗುಪ್ಪೆ... ಬರೆಯುತ್ತಾರೆ, "ಝೆನ್ ಗುರುವಿನಂತೆ ಬದುಕಿದ ಗೋನಾಳ್ ಸರ್"


ಝೆನ್ ಗುರು ಎಷುನ್ನಾ ಕುಳಿತಿದ್ದಾಳೆ. ಅವರಲ್ಲಿಗೆ ಒಬ್ಬ ಯುವಕ ಶಿಷ್ಯತ್ವ ಸ್ವೀಕರಿಸಲು ಬರುತ್ತಾನೆ. ಆಶ್ರಮದಲ್ಲಿ ಊಟ ಮಾಡಿ ಗುರುವಿನ ಬಳಿ ಬಂದು ತಾನು ಬಂದ ಉದ್ದೇಶವನ್ನು ಹೇಳಿ, ‘ತಾನು ಮಾಡಬೇಕಾದ ಕೆಲಸ ಏನು’ ಎಂದು ಕೇಳುತ್ತಾನೆ. ತಲೆ ಎತ್ತಿಯೂ ನೋಡದ ಎಷುನ್ನಾ ‘ಊಟ ಆಯಿತೇ’ ಎಂದು ಕೇಳುತ್ತಾಳೆ. ಯುವಕ ‘ಈಗ ತಾನೆ ಮಾಡಿದೆ’ ಎನ್ನುತ್ತಾನೆ. ಆಗ ಎಷುನ್ನಾ ‘ಹಾಗಾದರೆ ತಟ್ಟೆ ತೊಳೆದಿಡು’ ಎನ್ನುತ್ತಾಳೆ. ಇದು ಗೋನಾಳ್ ಸರ್ ಅವರ ಜೀವನ ದೃಷ್ಟಿಕೋನ,
40 ವರ್ಷಗಳ ಹಿಂದೆಯೇ ಎಂಎಸ್ ಸಿ ಮಾಡಿದ್ದ ಅವರು, ಸುಮಾರು 10ಕ್ಕೂ ಹೆಚ್ಚು ಭಾಷೆಗಳನ್ನು ಬಲ್ಲ ವಿಷಯ ಗ್ರಾಹಿಯಾಗಿದ್ದರು. ವಿಜ್ಞಾನ, ತತ್ವಜ್ಞಾನ, ಮ್ಯಾಜಿಕ್ ಇತ್ಯಾದಿ ಹತ್ತಾರು ವಿಷಯಗಳ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದರು. ಆದರೆ ಸಂಗೀತದ ಕರೆಗೆ ಒಲಿದು ಅದನ್ನೇ ಕೈ ಹಿಡಿದರು. ಹತ್ತು ಹಲವು ಸಿನಿಮಾಗಳಿಗೆ ಯಶಸ್ವಿ ಸಂಗೀತ ನೀಡಿ ಮುನ್ನೆಲೆಗೆ ಬರುತ್ತಲೇ ಬದುಕಿನಲ್ಲಿ ಘಟಿಸಿದ ಪ್ರೀತಿಯಿಂದ ವಂಚಿತರಾಗಿ, ಅದನ್ನು ಮರೆಯುವ ಸಲುವಾಗಿ ರಂಗಭೂಮಿ ಕಡೆಗೆ ಬಂದರು.
‘ ಅದೇ ಪ್ರೀತಿಯ ಕನಸನ್ನೇ ಮನದಲ್ಲಿ ಹೊತ್ತು ಮದುವೆಯನ್ನು ಶಾಶ್ವತವಾಗಿ ಮುಂದೂಡಿಬಿಟ್ಟರು. ಅತ್ಯಂತ ಶಿಸ್ತಿನ ಚಲನಶೀಲ ಮನಸ್ಸು, ಒಳಗೊಂದು, ಹೊರಗೊಂದಿಲ್ಲದ ಸ್ಪಷ್ಟ ಮಾತು. ಮುಖಸ್ತುತಿ, ಓಲೈಕೆ ಇಲ್ಲದ ನೇರ ಮಾತು. ಸರಳವಾದ ಸಾದಾ ಪ್ಯಾಂಟ್ ಶರ್ಟ್ ಕಣ್ಣಿಗೆ ಸುಂದರ ಚೌಕಟ್ಟು ನೀಡುವ ಕನ್ನಡಕ, ನೀಟಾಗಿ ಬಾಚಿದ ತಲೆಗೂದಲು, ಗದ್ದಲಗಳಿಂದ ದೂರವಾಗಿ ಸಿಗರೇಟು ಸೇದುತ್ತಾ ಯೋಚನಾ ಮಗ್ನ ನೋಟ.  
ಎರಡು ದಶಕ ಸಿನಿಮಾ ಸಂಗೀತ ಕ್ಷೇತ್ರದಲ್ಲೂ, ಎರಡು ದಶಕ ರಂಗಭೂಮಿಯಲ್ಲಿ ಸಂಗೀತ ನೀಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಿದ ಇಸ್ಮಾಯಿಲ್ ಗೋನಾಳ್ ಅವರ ಸರಳ ವ್ಯಕ್ತಿತ್ವ ಇದು. ಜನಜಂಗುಳಿಯಿಂದ ದೂರ ಇರುತ್ತಿದ್ದ ಅವರದ್ದು ಮಗುವಿನಂಥಾ ಮನಸ್ಸು. ಅಪರಿಚಿತರು ವಿಳಾಸ ಕೇಳಿದರೂ ತುಂಬಾ ಆಸಕ್ತಿಯಿಂದ ಹತ್ತಾರು ದಾರಿ ಹೇಳುವಷ್ಟು ತಾಳ್ಮೆ ಅವರದ್ದು, ಉಡಾಫೆ ಮತ್ತು ನಿರ್ಲಕ್ಷ್ಯದ ಧೋರಣೆ, ಅಹಂಕಾರ, ಮತ್ಸರ ಇತ್ಯಾದಿಗಳು ಅವರಿಂದ ತುಂಬಾ ದೂರ.
ವಿನಯ ಮತ್ತು ನಾಚಿಕೆ ಕಲಾವಿದನಿಗೆ ಇರಬೇಕಾದ ಅತ್ಯಂತ ಅಗತ್ಯವಾದ ಸಾಂಸ್ಕೃತಿಕ ಆಸ್ತಿ. ಕಲಾವಿದನ ಸಾಂಸ್ಕೃತಿಕ ಅಸ್ಮಿತೆ ಇವು. ಆದರೆ, ಇಂದು ಕಲಾಕ್ಷೇತ್ರ ಹಾಗೂ ಸಂಸ್ಕೃತಿ ಇಲಾಖೆ ಸುತ್ತ ತುಂಬಿಕೊಂಡಿರುವ ಸಂಘಟಕರು ಹಾಗೂ ಕಲಾವಿದರಿಗೆ ಇವುಗಳ ಪರಿಚಯವೇ ಇಲ್ಲ. ಯಾರು ಸಾಯುತ್ತಾರೆ, ಯಾರಿಗೆ ಸನ್ಮಾನ ಮಾಡಬೇಕು ಇತ್ಯಾದಿ ಅನುದಾನದ ಫೈಲ್ ಸಿದ್ದಪಡಿಸುವುದನ್ನೇ ಸಂಸ್ಕೃತಿ, ಕಲಾ ಚಟುವಟಿಕೆ ಎಂದು ತಿಳಿದಿರುವ ಬುದ್ಧಿವಂತರು.
ಆರ್ಥಿಕ ಮತ್ತು ರಾಜಕೀಯ ಕಾರಣಗಳಿಂದಾಗಿ ಇಂದು ಕಲಾವಿದರಿಂದ ಕಾಣೆಯಾಗಿರುವ ಮಾತು ಮತ್ತು ಮೌನದ ನಡುವಿನ ಸೂಕ್ಷ್ಮ ವ್ಯತ್ಯಾಸವನ್ನು ಗೋನಾಳ್ ಸರ್ ಎಂದೂ ಕಳೆದುಕೊಂಡಿರಲಿಲ್ಲ. ಇಸ್ಮಾಯಿಲ್ ಸಂಪದ್ಬರಿತ ಸಾಂಸ್ಕೃತಿಕ ಲಕ್ಷಣಗಳನ್ನು ಹೊಂದಿದ್ದ ಅತ್ಯಂತ ನಾಚಿಕೆ ಮತ್ತು ಮುಜುಗರ ತುಂಬಿದ ವಿನಯ ತುಂಬಿದ ವ್ಯಕ್ತಿ.
ಆಸ್ತಿಕರಾಗಿದ್ದ ಅವರು ಎಂದೂ ಪ್ರಾರ್ಥನೆಗೆಂದು ಮಸೀದೆಗೆ ಹೋದವರಲ್ಲ. ಹಾಗೆಂದು ಎಂದೂ ಪ್ರಾರ್ಥನೆ ಮರೆತವರಲ್ಲ. ಕರ್ಮಟ ಹಿಂದೂ –ಮುಸ್ಲಿಮರಿಗೆ ಇದು ಯೋಚಿಸಬೇಕಾದ ಸಂಗತಿ.
ಸಾರ್ ದೇವರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದರೆ, ದೇವರ ಮೇಲಿನ ನಂಬಿಕೆ ಒಳ್ಳೆಯದು. ಪಂಚಭೂತಗಳು ಮನುಷ್ಯನನ್ನು ಪ್ರಭಾವಿಸುತ್ತವೆ. ದೇವರ ನಂಬಿಕೆ ಎಂಬುದೊಂದು ಇಲ್ಲದಿದ್ದಲ್ಲಿ ಜನರ ನಡುವೆ ನಂಬಿಕೆ ಇರುತ್ತಿರಲಿಲ್ಲ. ಸಾಮಾನ್ಯ ಮನುಷ್ಯರಿಗೆ ದೇವರು ಒಂದು ನೆಮ್ಮದಿಯ ಸಂಗತಿ ಎಂದು ದೇವರ ಅಗತ್ಯವನ್ನು ಒತ್ತಿ ಹೇಳುತ್ತಿದ್ದರು.
ಕೆಲ ನಿರ್ದೇಶಕರ ಮುಖವಾಡ ಹಾಕಿದ ಕೃತಕ ನಡವಳಿಕೆ ಹಾಗೂ ತಿರಸ್ಕಾರವನ್ನು ಕಂಡು ಅವರು, ನೋಡಿ ನಾನು ಮತ್ತೆ ಸಿನಿಮಾ ಕಡೆಗೆ ಸಂಗೀತ ನೀಡಲು ಹೋಗ್ತಿದ್ದೇನೆ. ಇವರಿಗೆ ನನ್ನ ಶಕ್ತಿ ಏನೆಂದು ತೋರಿಸುತ್ತೇನೆ. ನಾನು ಕಡಿಮೆಯಲ್ಲ. ಇನ್ನು ಮುಂದೇನಿದ್ದರೂ ಸಿನಿಮಾ ಕ್ಷೇತ್ರವೇ ನನ್ನ ಕಾರ್ಯಕ್ಷೇತ್ರ ಎಂದು ಅಬ್ಬರಿಸುತ್ತಿದ್ದರು.
ತುಂಬಾ ಗಿಜಿಗುಡುವ ಜನ, ಅಬ್ಬರ, ಗಲಾಟೆಗಳಿಂದ ಅವರೆಂದೂ ದೂರ ಇರುತ್ತಿದ್ದರು. ಒಮ್ಮೆ ಒಂದು ಹಾಡಿಗೆ ಸಂಗೀತ ಸಂಯೋಜಿಸಿ ಅದನ್ನು ಹಾಡುಗಾರರಿಗೆ ತರಬೇತಿ ನೀಡಿದರೆ, ಇನ್ನು ಅರ್ಧ ಗಂಟೆ ಏಕಾಂತದಲ್ಲಿ ಟೀ ಕುಡಿಯುತ್ತ, ಬೆರಳಿಗೆ ಸಿಗರೇಟು ಸಿಗಿಸಿಕೊಂಡು ಆಕಾಶ ನೋಡುತ್ತಾ ಯೋಚನಾ ಮಗ್ನರಾಗಿರುತ್ತಿದ್ದರು.
ಎರಡು ದಶಕಗಳಿಗೂ ಹೆಚ್ಚು ಕಾಲ ಸುಮಾರು 200ಕ್ಕೂ ಹೆಚ್ಚು ನಾಟಕಗಳಿಗೆ ಸಂಗೀತ ನೀಡಿ ರಂಗಭೂಮಿಯ ಆತ್ಮಸಾಕ್ಷಿಯನ್ನು ಹೆಚ್ಚಿಸಿದ್ದಾರೆ. ವ್ಯಾಪಾರದ ದೃಷ್ಟಿಯಿಂದ ಅವರೆಂದು ಸಂಗೀತವನ್ನು ನೋಡಲಿಲ್ಲ. ರೂಮಿಗೆ ಬಾಡಿಗೆ ಕಟ್ಟಲು ಕಷ್ಟವಿದ್ದಾಗಲೂ ಅವರೆಂದೂ ಹೇಳಿಕೊಳ್ಳುತ್ತಿರಲಿಲ್ಲ. ಇಷ್ಟೇ ಬೇಕು ಎಂದೂ ಅವರೆಂದೂ ಕೇಳಿದವರಲ್ಲ.ಎಷ್ಟೋ ಮಂದಿ ಸಂಗೀತ ಮಾಡಿಸಿಕೊಂಡು ಪುಡಿಗಾಸು ಕೊಟ್ಟಾಗಲೂ ಅವರು ಮರು ಮಾತನಾಡಿಲ್ಲ.
ಅವರಿಂದ ಹತ್ತಾರು ನಾಟಕ, ಜಾಥಾಗಳಿಗೆ ಸಂಗೀತ ಮಾಡಿಸಿಕೊಂಡು ಬೆಳೆದ ದೊಡ್ಡ ರಂಗ ನಿರ್ದೇಶಕರೊಬ್ಬರು ಲಕ್ಷಾಂತರ ರೂಪಾಯಿ ಬಜೆಟ್ಟಿನ ನಾಟಕ ಆಡಿಸಿದಾಗ ಗೋನಾಳ್ ಅವರಿಗೆ ಮಾತ್ರ ಅವಕಾಶ ನೀಡಲಿಲ್ಲ. ಸಿನಿಮಾದ ಪ್ರಸಿದ್ಧ ಸಂಗೀತ ಸಂಯೋಜಕರನ್ನು ಕರೆ ತಂದು ಲಕ್ಷಾಂತರ ರೂಪಾಯಿ ಹಣ ನೀಡಿದಾಗಲೂ ಗೋನಾಳ್ ಬೇಸರಗೊಳ್ಳಲಿಲ್ಲ. ಅಲ್ಲಿ, ಇಲ್ಲಿ ಸಂಗೀತ ನೀಡಿ ಬಂದ ಹಣದಿಂದ ಕಷ್ಟದಲ್ಲೂ ಇದೇ ನಿರ್ದೇಶಕರ ರೂಮಿಗೆ ಬಾಡಿಗೆಯನ್ನೂ ತಾವೇ ಕಟ್ಟುತ್ತಾ ಸರಿ ದೂಗಿಸುತ್ತಿದ್ದರು.
ಸುಖಾಸುಮ್ಮನೆ ಯಾರ ಬಗ್ಗೆಯೂ ಟೀಕೆ ಮಾಡುವ ಲಕ್ಷಣ ಅವದ್ದಾಗಿರಲಿಲ್ಲ. ಸಾಮಾನ್ಯವಾಗಿ ಅವರ ಶಿಶ್ಯರಾದ ನಾವು. ‘ ಆ ನಿರ್ದೇಶಕರು ನಿಮಗೇ ಹೀಗೆ ಮಾಡಿದರಲ್ಲ ಸಾರ್. ಇದು ಸರೀನಾ’ ಎಂದು ಪ್ರಶ್ನಿಸಿದರೆ ಗೋನಾಳ್, ‘ನೋಡಿ ಅವರು ವ್ಯವಹಾರ ಪ್ರಜ್ಞೆಯುಳ್ಳವರು, ಲಾಭ ನಷ್ಟದ ಲೆಕ್ಕಾಚಾರ ಬಲ್ಲವರು, ಅವರು ಸರಿಯಾಗೇ ಇದ್ದಾರೆ. ನಿಮ್ಮ ನಿರೀಕ್ಷೆಯೇ ತಪ್ಪು’ ಎಂದು ನಮಗೆ ಟಾಂಗ್ ನೀಡುತ್ತಿದ್ದರು.
ಇಸ್ಮಾಯಿಲ್ ಸರ್ ಗಾಂಧಿಯಂತೆ,ಸಂತನಂತೆ, ಆಧ್ಯಾತ್ಮಿಕ ಚಿಂತಕನಂತೆ ಸರಳವಾಗಿ ಬದುಕಿದರು. ಸನ್ಮಾನಗಳಿಂದ ಅವರೆಂದೂ ಬಹುದೂರು. ಅವರ ಸುತ್ತ ಏನೂ ಅಲ್ಲದವರೂ ಸನ್ಮಾನ, ಪ್ರಶಸ್ತಿಗಳಿಂದ ವಿಜೃಂಬಿಸುತ್ತಿದ್ದರೆ, ಗೋನಾಳ್ ಸರ್, ನಾಟಕದ ಕಾಲ್ ಕರ್ಟನ್ ವೇಳೆ ಸಂಗೀತ ಸಂಯೋಜಕರು ಅವರ ಹೆಸರನ್ನೂ ಕರೆದರೂ ವೇದಿಕೆಗೆ ಬರಲು ತೀವ್ರ ಮುಜುಗರ ಪಡುತ್ತಿದ್ದರು. ಶಿಷ್ಯರಾದ ನಮ್ಮ ಕೆಲವು ಸ್ನೇತರು ಅವರಿಗೆ ಸಣ್ಣದಾಗಿ ಸನ್ಮಾನಿಸುವುದಾಗಿ ಹೇಳಿದಾಗ ಅವರು ‘ಸಾಧ್ಯವೇ ಇಲ್ಲ. ನೀವಾರು ನನಗೆ ಸನ್ಮಾನ ಮಾಡಲು.. ಯಾರಾದರೂ ನೋಡಿದರೆ ಕಾಸು ಕೊಟ್ಟು ಸನ್ಮಾನ ಮಾಡಿಸಿಕೊಂಡಿದ್ದಾನೆ ಅಂದುಕೊಳ್ಳುವುದಿಲ್ಲವೇ’ ಎಂದು ಭಯಪಡುತ್ತಿದ್ದರು. ಪ್ರಶಸ್ತಿಗಾಗಿ ವಸೂಲಿ ಬಾಜಿ ಮಾಡುವ, ಬೀದಿಗಳಲ್ಲಿ ಪ್ರಶಸ್ತಿಗಳು ಮಾರಾಟವಾಗುತ್ತಿರುವ ಸಂದರ್ಭದಲ್ಲಿ ಗೋನಾಳ ಮುಜುಗರ ಎಷ್ಟೊಂದು ಆರೋಗ್ಯಕರವಾದದ್ದು ಅಲ್ಲವೇ?
ಬಿವಿ ಕಾರಂತರ ನಂತರ ರಂಗ ಸಂಗೀತವನ್ನು ಶ್ರೀಮಂತಗೊಳಿಸಿದ ಕೀರ್ತಿ ಇಸ್ಮಾಯಿಲ್ ಗೋನಾಳ್ ಸರ್ ಗೆ ಸಲ್ಲಬೇಕು. ಕನ್ನಡ ರಂಗಭೂಮಿ ಇನ್ನಷ್ಟು ಚಲನಶೀಲವಾಗಿದ್ದರೆ ಗೋನಾಳರ ಸಂಗೀತದ ಮಹತ್ವ ಅರಿತು ಅವರಲ್ಲಿನ ಸಂಗೀತ ಪ್ರತಿಭೆಯನ್ನು ಬಳಸಿಕೊಳ್ಳುತ್ತಿತ್ತು. ಆದರೆ ಕಳೆದ 2 ದಶಕಗಳಿಂದ ರಂಗಭೂಮಿಯೇ ಸೊರಗುತ್ತಿರುವ ರಂಗ ತಜ್ಞರಿಗೆ ಗೋನಾಳ್ ಅವರಲ್ಲಿನ ಸಂಗೀತ ಪ್ರತಿಭೆ ಕಾಣುವ ಕಣ್ಣು ಎಲ್ಲಿಂದ ಬರಬೇಕು ಹೇಳಿ.
ನನ್ನ ಐದರಿಂದ ಆರು ನಾಟಕಗಳಿಗೆ ಸಂಗೀತ ಸಂಯೋಜನೆ ಮಾಡಿರುವ ಗೋನಾಳ್ ಸರ್ ಇದ್ದರೆ, ಒಂದು ಬಲ ಮತ್ತು ನೆಮ್ಮದಿ.. ಹೇಳಿದ ಟೈಮ್ ಗೆ ಪಕ್ಕಾ ಹಾಜರ್, ನಾಟಕ ಮಾಡಿಸುವ ಕಾಲೇಜಿನ ವಿದ್ಯಾರ್ಥಿಗಳಿಗಳಲ್ಲೇ ಕೆಲವರಿಗೆ ಸ್ವರ ತಾಳ ಹೇಳಿಕೊಟ್ಟು ತಯಾರು ಮಾಡುವ ಪೂರ್ವ ಸಿದ್ದತೆ, ಅವರಿಗೆ ತರಬೇತಿ ನೀಡಿ ಹಾಡಿಸುವ ಮೂಲಕ ಪ್ರೋತ್ಸಾಹ. ಸಂಗೀತದ ಸ್ಕ್ರಿಪ್ಟನ್ನೂ ಸ್ವತಃ ಬರೆದುಕೊಳ್ಳುತ್ತಿದ್ದರು. ಅದನ್ನು ನೋಡಿಕೊಂಡು ಯಾರು ಬೇಕಾದರೂ ಅವರ ಕಲ್ಪನೆಯಂತೆ ಸಂಗೀತ ಸಂಯೋಜಿಸಹುದಿತ್ತು.
ಆಶ್ರಮದಲ್ಲಿ ಕುಳಿತಿದ್ದ ಎಷುನ್ನಾಗೆ ಒಂದು ದಿನ ಇದ್ದಕ್ಕಿದ್ದಂತೆ ತಾನು ಬದುಕಿದ್ದು ಸಾಕು ಎನಿಸಿತು. ಶಿಷ್ಯರಿಗೆ ಸೌಧೆಗಳನ್ನು ಕೂಡಿ ಹಾಕಲು ಹೇಳಿದಳು. ಆ ಸೌಧೆಯ ಮೇಲೆ ಹೋಗಿ ಕುಳಿತು ಬೆಂಕಿ ಹಚ್ಚುವಂತೆ ಸೂಚಿಸಿದಳು. ಬೆಂಕಿ ಹತ್ತಿ ಉರಿಯುತ್ತಿದ್ದಂತೆ ಶಿಷ್ಯನೊಬ್ಬ ದೂರದಿಂದ ಕೂಗಿ ಹೇಳಿದ ‘ನಿನಗೆ ಬೆಂಕಿಯ ಉರಿ ತಾಗುತ್ತಿಲ್ಲವೇ’ ಎಂದು. ಅದಕ್ಕೆ ಎಷುನ್ನಾ ಮೌನವಾಗಿ ಹೇಳಿದಳು ‘ನಿನ್ನಂಥಾ ಮೂರ್ಖರಿಗೆ ಇಂಥಾ ಪ್ರಶ್ನೆಗಳೇ ಹೊಳೆಯುವುದು’ ಎಂದು

ಗೋನಾಳ್ ಸರ್ ಕೂಡ ಝೆನ್ ಗುರುವಿನಂತೆ ಬದುಕು ಮುಗಿಸಿ ಹೋಗಿದ್ದಾರೆ. ಹೀಗೆ ಹೋಗಿ ನಮ್ಮೊಳಗೆ ಅವರು ಶಾಶ್ವತವಾಗಿ ಉಳಿದುಬಿಟ್ಟಿದ್ದಾರೆ. 

ಗೋವಿಂದರಾಜ ಬೈಚಗುಪ್ಪೆ,
ಪತ್ರಕರ್ತ, ರಂಗ ನಿರ್ದೇಶಕ

ಬುಧವಾರ, ಜುಲೈ 31, 2013

"ಮಬ್ಬುಗತ್ತಲು"



ಅವಳನೊಮ್ಮೆ ಅಪ್ಪಿಕೊಳ್ಳಬೇಕಾಗಿತ್ತು... ಅವಳನೊಮ್ಮೆ ಅಪ್ಪಿಕೊಳ್ಳಬೇಕಾಗಿತ್ತು ಎಂದು ಅನಿಸಿದ್ದು ಅವಳಿಂದ ಒಂದಷ್ಟು ದೂರವಾದ ಬಂದ ಮೇಲೆ. ಅವಳ ಮುಖವಂತು ನನಗೆ  ಖಂಡಿತಾ ನೆನಪಿಲ್ಲ, ಕಾರಣ ಅದು 'ಮಬ್ಬುಗತ್ತಲು' ಆದರೆ ಅವಳು ಕೇಳಿದ ಮಾತುಗಳು ಮಾತ್ರ ನನಗೆ ಸ್ಪಷ್ಟವಾಗಿ ನೆನಪಿದೆ.
ಹಲೋ.. ಬರ್ತಿರಾ...
ನನ್ನದೆ ಲೋಕದಲ್ಲಿ ಯೋಚಿಸುತ್ತಾ ರಸ್ತೆಯ ಮೇಲೆ ನಡೆದುಹೋಗುತ್ತಿದ್ದ ನಾನು ಚಣ ಬೆಚ್ಚಿದವನಂತೆ ಅತ್ತ ನೋಡಿ ನಿಂತು ಕೊಂಡಾಗ; ಕತ್ತಲಲ್ಲಿ ನಿಂತಿದ್ದ ಆಕೆ ಕ್ಷಣಾರ್ಧದಲ್ಲಿ ನನ್ನ ಹತ್ತಿರಕ್ಕೆ ಬಂದು ನಗುಮುಖದಿಂದ ಎಷ್ಟು ಕೊಡ್ತಿರಾ...? ಎಂದು ಕೇಳಿದಾಗ ನಾನು ಒಮ್ಮೆಲೆ ಗಾಬರಿಯಾಗಿ ಏನು ಮಾತಾಡಲು ತೋಚದೆ ಎಷ್ಟು ಕೊಡಬೇಕು ಎಂದು ಕೇಳಿಬಟ್ಟೆನಾದರು ನಂತರ ನನಗೆ ಯಾಕೋ ತಳಮಳ ಶುರುವಾಯಿತು. ನಿಂತುಕೊಳ್ಳಲೇ ಇಲ್ಲ ಸರಸರ ನಡೆಯಲು ಪ್ರಾರಂಭಿಸಿದೆ.ಆಕೆ ಆಕರ್ಷಕವಾಗಿ ಸೀರೆ ತೊಟ್ಟಿದ್ದಾಳೆ ಅನ್ನುವುದು ಮಾತ್ರ ನನ್ನ ಮನಸಿನೊಳಗೆ ಪ್ರತಿಬಿಂಬಿಸುತ್ತಿದೆ.
ಹಲೋ... ಬನ್ನಿ
ಎಷ್ಟು ಕೊಡ್ತಿರಾ... ಬನ್ನಿ ಹೋಗಬೇಡಿ
ಹಲೋ... ಒಂದು ಮಾತೇಳಿ.. ಎಷ್ಟು ಕೋಡ್ತಿರಾ....
ಯಾಕ್ ಹಾಂಗ್ ಹೋಗ್ತಿದ್ದಿರಾ...? ಬನ್ನಿ ಎಂದು ನನ್ನ ಹಿಂಬಾಲಿಸಲು ಶುರು ಮಾಡಿದಳು. ನಾನು ಓಡಿ ಬಂದು ಬಸ್ಸು ಹತ್ತಿಕೊಂಡುಬಿಟ್ಟೆ ಯಾಕೋ ಗೊತ್ತಿಲ್ಲ ನನ್ನ ಹೃದಯ ಬಡಿತ ನಿಲ್ಲುತ್ತಲೇ ಇಲ್ಲ. ಅವಳು ಕೇಳಿದ ಮಾತುಗಳು ನನ್ನೊಳಗೆ ಮತ್ತೆ ಮತ್ತೆ ಪುನರಾವರ್ತನೆಗೊಳ್ಳುತ್ತಿವೆ. ನನ್ನ ಬಗ್ಗೆ ನನಗೇ ಹೇಸಿಗೆ ಅನಿಸುತ್ತಿದೆ. ನನ್ನ ಭಯವನ್ನು ಕಂಡು ನನಗೆ ನಾಚಿಕೆಯಾಗಿದೆ. ನಾನು ಅವಳನ್ನು ಕಂಡು ಯಾಕೆ ಅಷ್ಟು ತಳಮಳಕ್ಕೊಳಗಾದೆ...? ನಾ ಅವಳನ್ನೊಮ್ಮೆ ಮಾತಾಡಿಸಬಹುದಿತ್ತಲ್ಲ. ಆಕೆ ನನ್ನನ್ನು ಬಾ  ಕೇಳಿದ ಮಾತ್ರಕ್ಕೆ ಪ್ರಳಯವೇ ಸಂಭವಿಸಿಬಿಡುತ್ತಿತ್ತೆ, ಅಥವಾ ಆಕೆ ನನ್ನ ತಿಂದು ಬಿಡುತ್ತಿದ್ದಳೆ, ಆಕೆಯು ಮನುಷ್ಯಳಲ್ಲವೆ, ಆತ್ಮೀಯವಾಗಿ ಅವಳ ವೈಯಕ್ತಿಕ ಬದುಕಿನ ಬಗ್ಗೆ ಕೇಳಬಹುದಿತ್ತಲ್ಲ,  ಆಕೆಯನ್ನು ಪರಿಚಯಮಾಡಿಕೊಂಡಿದ್ದರೆ ಚೆನ್ನಾಗಿರುತ್ತಿತ್ತಲ್ಲವೆ? ಎಂದೆಲ್ಲಾ ಏನೇನೋ ನನ್ನೊಳಗೆ ನಾನೆ ಅಂದುಕೊಳ್ಳುತ್ತ ಹಾಸ್ಟೆಲ್ ರೂಂ ಸೇರಿದಾಗ ಸಮಯ ರಾತ್ರಿ ಸುಮಾರು ಹನ್ನೊಂದುವರೆ ಆಗಿರಬಹುದು. ಅಂತು ಮಲಗುವ ಸಾಹಸಕ್ಕೆ ಪ್ರಯತ್ನಿಸಿದೆನಾದರೂ ನಿದ್ದೆ ಬರುವುದು ಮಾತ್ರ ಬಹಳ ದೂರು ಇದೆ. ಕಂಬಳಿ  ಹೊದ್ದು ಗಟ್ಟಿಯಾಗಿ ಕಣ್ಮುಚ್ಚಿಕೊಂಡರು ನಿದ್ರೆಯ ಸುಳಿವೇ ಇಲ್ಲ. ಸರಿ ಎಂದು ಹಾಗೆ ಕತ್ತಲನ್ನು ಕಣ್ತುಂಬಿಕೊಳ್ಳುತ್ತಾ ಏನಾಯಿತು ನನ್ನ ಮನಸ್ಸಿಗೆ ಎಂದು ನನ್ನ ಹುಚ್ಚುತನವನ್ನು ನಾನೇ ಬೈದುಕೊಂಡೆ. ಹೊರಗೆ ಬಂದು ಕತ್ತಲ ಆಕಾಶವನ್ನೊಮ್ಮೆ ವೀಕ್ಷಿಸಿದೆ. ಮತ್ತೆ ಬಂದು ಚಾಪೆಯ ಮೇಲೆ ಸುಮ್ಮನೆ ಮಲಗಿಕೊಂಡೆ.  ದೇಹಮಲಗಿಕೊಂಡರೂ ಮನಸ್ಸು ಯೋಚಿಸುತ್ತಲೇ ಇತ್ತು ಕೆಲವು ದಿನಗಳ ಹಿಂದೆ ಸೆಕೆಂಡ್ ಶಿಪ್ಟ್ ಕೆಲಸ ಮುಗಿಸಿಕೊಂಡು 11 ಗಂಟೆ ಸುಮಾರಿಗೆ ಮೆಜಸ್ಟಿಕ್ನ ಕೆ.ಜಿ ರಸ್ತೆಯಲ್ಲಿ ನಡೆದು ಬರುತ್ತಿರಬೇಕಾದರೆ ನಾನು ಸೆಕ್ಸ್ ವರ್ಕಸ್ ನ ಮಾತನಾಡಿಸಿದುದು ನೆನಪಾಯಿತು. ಆಕೆಗೆ ಸುಮಾರು ಮುವತ್ತೈದು ವರ್ಷ ವಯಸ್ಸಿರಬಹುದು. ಗೋಡೆ ಪಕ್ಕ ಸೇವೆಗಾಗಿ ನಿಂತಿದ್ದಾಳೆ. ನಾನು ಹತ್ತಿರಕ್ಕೆ ಹೋಗಿ ಮಾತನಾಡಿಸಿದಾಗ ನಾನು ಗಿರಾಕಿ ಎಂದು ತಿಳಿದು ಬನ್ನಿ ಬನ್ನಿ.... ಎಂದು ಆಕೆಯೇ ನನ್ನ ಹತ್ತಿರಕ್ಕೆ ಕರೆದುಕೊಂಡಳು.. ನಾನು ಆವೇಶಕ್ಕೆ ಒಳಗಾಗದೆ; ನಿಮ್ಮ ಬಗ್ಗೆ ಒಂದಷ್ಟು ಕತೆನೋ ಕಾದಂಬರಿಯೋ ಬರೆಯಬೇಕೆಂದಿದ್ದೇನೆ. ನಿಮ್ಮಿಂದ ಒಂದಷ್ಟು ಮಾಹಿತಿ ಬೇಕಾಗಿತ್ತು..... ಎಂದೆ. ಅದಕ್ಕೆ ತುಂಬಾ ನಿರಾಸೆಗೊಂಡವಳಂತೆ ಪಕ್ಕದಲ್ಲಿ ನಿಂತಿದ್ದ ಯುವತಿಯ ಕಡೆ ಕೈತೋರಿತಸಿ; ಆಕೆ ಅಲ್ಲೆ ಅವಳನ್ನೆ ನೋಡುತ್ತಾ ನಿಂತಿದ್ದ ಪುರುಷನ ಬಳಿಹೋಗಿ ವ್ಯಾಪಾರ ಕುದುರಿಸುವುದರಲ್ಲಿ ನಿರತಳಾಗಿಬಿಟ್ಟಳು. ಯುವತಿಯೇನೋ ಪ್ರೀತಿಯಿಂದಲೇ ಮಾತನಾಡಿಸಿ ನಮ್ಮದೇ ಒಂದು ಗುಂಪು ಇದೆ, ಅದು ಮೈಸೂರು ರಸ್ತೆಯಲ್ಲಿದೆ; ಅಲ್ಲಿಗೆ ಬನ್ನಿ ಮಾತಾಡುತ್ತೇವೆ. ಎಂದು ಹೇಳಿ ಆಕೆಯು ಮೌನವಾದಳು - ನಾನು ಇದೆ ಸಮಯವೆಂದು ತಿಳಿದು ಏನಾದರೂ ಮಾಡಿ ಅವರ ವೈಯಕ್ತಿಕ ವಿಚಾರಗಳೊಂದಿಷ್ಟು ಕಲೆ ಹಾಕಬೇಕೆಂದು ಅವಸರವಸರವಾಗಿ ಒಂದಷ್ಟು ಪ್ರಶ್ನೆಗಳನ್ನು ಮನಸ್ಸಿನಲ್ಲೇ ಸಿದ್ಧಪಡಿಸಿಕೊಂಡು ನಿಮ್ಮಲ್ಲಿ ಎಷ್ಟು ಜನಾ ಇದ್ದಿರಿ ಮೇಡಂ? ಎಂದೆ. ಅದಲ್ಲ ಇವಾಗ ಹೇಳಕ್ಕೆ ಆಗಲ್ಲ  ನಮ್ಮ ಆಫೀಸಿಗೆ ಬನ್ನಿ ಅಲ್ಲೇ ಎಲ್ಲಾ ಮಾಹಿತಿ ಸಿಗುತ್ತೆ ಎಂದು ಅಲ್ಲಿಂದ ಜಾಗ ಖಾಲಿ ಮಾಡಿದರು. ಸರಿ ಎಂದು ಅಲ್ಲೇ ರಸ್ತೆಯ ಬದಿಯಲ್ಲೇ ತಿಂಡಿ ತಿಂದು ರಾತ್ರಿ ಪಾಳಿ ಬಸ್ಸಿನಲ್ಲಿ ಡಬಲ್ ಚಾರ್ಚ್ ಕೊಟ್ಟು ಮನೆ ಸೇರಿದಾಗ ಸಮಯ ಸುಮಾರು ಹನ್ನೆರಡುವರೆ  ಆಗಿತ್ತು. ಮನಸ್ಸಿನಲ್ಲಿ ಮಾತ್ರ ಸಾವಿರಾರು ಪ್ರಶ್ನೆಗಳು ಯಾವುದೋ ಪುಸ್ತಕದ ಒಂದೆರಡು ಪುಟಗಳನ್ನು ತಿರುವಿಹಾಕಿ ಹಾಗೆ, ನಿದ್ರೆಗೆ ಜಾರಿದ್ದೇನೆ ಎಂದು ಗೊತ್ತಾಗಿದ್ದು ಬೆಳಿಗ್ಗೆ 6 ಗಂಟೆಗೆ ಆಲರಾಂ ಕಿರುಚಿಕೊಂಡಾಗಲೇ. ಅದೇ ವಾರದಲ್ಲಿ ಮತ್ತೊಂದು ಘಟನೆ ನನ್ನು ಕಣ್ಮುಂದೆಯೇ ನಡೆದುಹೋಯ್ತು. ಅದು ಮೆಜೆಸ್ಟಿಕ್ನ ಸಂಘ ಥಿಯೇಟರ್ ಬಳಿ ನಾನು ರಸ್ತೆ ದಾಟಿ ಬಸ್ಸ್ಸ್ಟಾಂಡಿಗೆ ತಲುಪುವ ಸಲುವಾಗಿ ರಸ್ತೆಬದಿ ನಿಂತು ರಸ್ತೆಯಲ್ಲಿ ವಾಹನಗಳು ಖಾಲಿಯಾಗಲಿ ಎಂದು ಕಾಯುತ್ತಿದ್ದೆ. ನಾನು ಬರಬೇಕಾದರೆ ಅದೇ ರಸ್ತೆಯಲ್ಲಿ ಇಬ್ಬರು ಮೂವರು ಸೇವಕಿಯರು ಉತ್ತರ ಕರ್ನಾಟಕದ ಯುವಕರ ಜೊತೆ ವ್ಯಾಪಾರ ಕುದುರಿಸುತ್ತಿದ್ದರು. ಯುವಕರು ಕಟ್ಟಡ ಕಾರ್ಮಿಕರೆಂಬುದು ಅವರನ್ನು ನೋಡುತ್ತಲೇ ಹೇಳಬಹುದು. ಇದ್ದಕ್ಕಿದ್ದಂತೆ ವಿಥೌಟ್ ಡ್ರೆಸ್ನಲ್ಲಿ ಬಂದ ಪೋಲಿಸ್ ಪೇದೆಗಳು ಯುವತಿಯರನ್ನು ದನಕ್ಕೆ ಬಡಿಯುವ ಹಾಗೆ ಬಡಿಯುತ್ತಾ ಅಟ್ಟಿಸಿಕೊಂಡು ಬರುತ್ತಿದ್ದುದ ಕಂಡು ನಾನು ರಸ್ತೆ ದಾಟುವುದನ್ನೇ ಬಿಟ್ಟು ಒಂದೆರಡು ನಿಮಿಷ ಅವರ ನಾಟಕವನ್ನು ವೀಕ್ಷಿಸುತ್ತಿದ್ದೆ. ಆದರೆ ಏಟು ತಿಂದ ಯುವತಿಯರು ಸತ್ತೆವೋ, ಬದುಕಿದೆವೋ ಎಂಬಂತೆ ಓಡುತ್ತಾ ಯಾವ್ಯಾವುದೋ ಸಂದಿಗಳಿಗೆ ನುಗ್ಗಿದರು. ಪೋಲಿಸನ ಹೊಡೆತದ ರಭಸಕ್ಕೆ ಪೆಟ್ಟು ತಪ್ಪಿಸಿಕೊಳ್ಳುವ ರಭಸದಲ್ಲಿ ಅಲ್ಲೆ ಇದ್ದ ಕಂಬಕ್ಕೆ ಡಿಕ್ಕಿ ಹೊಡೆದು. ಕೆಳಗೆ ಬಿದು ಕುಂಟುತ್ತಾ ಪಕ್ಕದ ಬೀದಿಗೆ ಪರಾರಿಯಾದ ಸೇವಕಿಯ ನೆನಪು ಮಾತ್ರ ನನ್ನ ನಿದ್ದೆ ಕೆಡಿಸಿತ್ತು. ರಾತ್ರಿ ಸಮಯ ಮೂರು ಗಂಟೆಯಾಗಿದೆ. ನನಗೆ ನಿದ್ದೆ ಮಾತ್ರ ಬರುತ್ತಿಲ್ಲ ಸಂಜೆ  ಮಾಡಿದ್ದ ಟೀ ಇದೆ. ಅದನ್ನೆ ಬಿಸಿ ಮಾಡಿ ಕುಡಿದೆ ಲೈಟ್ ಆಪ್ ಮಾಡಿ ಕತ್ತಲಲ್ಲಿ ಕುರ್ಚಿಯ ಮೇಲೆ ಕೂತು ಯೋಚಿಸಲು ಶುರು ಮಾಡಿದೆ.ಯಾಕೆ...? ಪೋಲಿಸಿನವರು ಅವರನ್ನು ಹಾಗೆ ದನಕ್ಕೆ ಬಡಿದಂಗೆ ಬಡಿಯುತ್ತಾರೆ. ಅವರಿಗೆ ಸಮಾಜದಲ್ಲಿ ಅವರಂತೆ ಬದುಕುವ ಹಕ್ಕಿಲ್ಲವೆ? ಅದು ಅವರ ವೃತ್ತಿ ಅದನ್ನೇಕೆ ಇವರು ತಪ್ಪು ಎನ್ನುತ್ತಾರೆ....? ಸಮಾಜದಲ್ಲಿ ಎಷ್ಟೋ ಕಾನೂನು ಬಾಹಿರವಾದ ವಿಷಯಗಳು ನಡೆಯುತ್ತಿದ್ದರೆ ಪ್ರಭುತ್ವ ನೋಡಿಯೂ ನೋಡದಂತೆ ನಟಿಸುವಾಗ ಸೆಕ್ಸ್ ಮಾಡುವುದು ಕಾನೂನು ಬಾಹಿರವೇ?
ಹೋಟೆಲ್ ಗಳು ಆಹಾರ ಪೂರೈಸುತ್ತವೆ. ಹಸಿವಾದವನು ಹೋಟಲ್ಗೆ ಹೋಗಿ ಊಟಮಾಡಿ ತನ್ನ ಹಸಿವು ನೀಗಿಸಿಕೊಳ್ಳುತ್ತಾನೆ. ಹಾಗೆಯೆ ದೇಹಕ್ಕೆ ಆಹಾರ ಎಷ್ಟು ಅವಶ್ಯಕವೋ... ಸೆಕ್ಸ್ ಕೂಡ ಅಷ್ಟೇ ಅವಶ್ಯಕವಾದುದಲ್ಲವೆ. ಸೆಕ್ಸ್ ವರ್ಕಸ್ ಕೂಡ ಹಾಗೆ ಮನುಷ್ಯನ ಬಹುದೊಡ್ಡ ಅವಶ್ಯಕತೆಯನ್ನು ಪೂರೈಸುತ್ತಿದ್ದಾರೆ. ಅನ್ನುವ ಸಾಮಾನ್ಯ ಜ್ಞಾನವೂ ಇಲ್ಲದ ನನ್ನ ಮಕ್ಕಳ್ನ ಅದೇನ್ ತಗೊಂಡು ಹೊಡಿಯಬೇಕೋ ಗೊತ್ತಾಗುತ್ತಿಲ್ಲ ಎಂದು ಡೈರೆಕ್ಟರ್ ಶ್ರೀನಿವಾಸ ಕಾಫಿ ಕುಡಿಯುತ್ತ ಅಂದ ಮಾತು ಸತ್ಯ ಅನಿಸಿತು. ಘಟನೆ ನಡೆದ ಒಂದೆರಡು ದಿನಕ್ಕೆ  ಅದೇ ರಸ್ತೆಯಲ್ಲಿನ ಪುಟ್ಪಾತ್ ಮೇಲೆ ಚಪ್ಪಲಿ ಹೊಲೆಯುವ ಅಜ್ಜನ ಬಳಿ ವಿಷಯವನ್ನು ಪ್ರಸ್ತಾಪಿಸಿದಾಗ ಆತ ಹೇಳಿದ ಸತ್ಯ ಕಥೆ ಹೀಗಿತ್ತು.... ಪೋಲಿಸಿನವರು ಪ್ರತಿದಿನ ಹೆಂಗಸರ ಬಳಿ ಇಷ್ಟು ಅಂತ ಕಮೀಷನ್ ಪಡೆಯುತ್ತಾರೆ ವ್ಯಾಪಾರವಿಲ್ಲದ ಹೆಂಗಸರು ಮಾಮೂಲಿ ಕೊಡಲು ನೋವುಗಳನ್ನು ಹೇಳಿಕೊಳ್ಳುತ್ತಾರೆ. ಆಗ ಇದೇ ರೀತಿ ಹೊಡೆದು ಓಡಿಸುತ್ತಾರೆ. ಮತ್ತೆ ಇಲ್ಲಿರುವ ಪೇದೆಗಳಿಗಿಂತ ಮೇಲಾಧಿಕಾರಿಗಳು ಬಂದಾಗ ಅವರ ಮುಂದೆ ಪ್ರಾಮಾಣಿಕವಾಗಿ ಕೆಲಸಮಾಡುತ್ತಿದ್ದೇವೆ ಎನ್ನುವುದನ್ನು ತೋರಿಕೊಳ್ಳಲು ಹೀಗೆ ಮಾಡುತ್ತಾರೆ. ಇವೆಲ್ಲವು ಮಾಮೂಲಿ ದಿನಾ ನಡೆಯುತ್ತಲೆ ಇರುತ್ತವೆ. ನೋಡಿ... ನೋಡಿ... ಸಹಜ ಅನ್ನಿಸಿದೆ.
ಹೀಗೆ ಏಟುಗಳು ತಿಂದ ಹೆಣ್ಣಮಕ್ಕಳು ನಾಳೆ ಬರ್ತಾರೆ ನನ್ನ ಬಳಿ ತನ್ನ ನೋವುಗಳನ್ನೆಲ್ಲ ಹೇಳ್ತಾರೆ. ಗಾಯಗಳನ್ನು ತೋರಿಸ್ತಾರೆ. ನಾವೇನು ಮಾಡಲಿ ಕೆಲಸ ಬಿಟ್ಟು ಬಿಡಿ ಅಂದರೂ, ಅವರಿಗೆ ಕೆಲಸ ಒಗ್ಗಿ ಹೋಗಿದೆ ಅಂತಾರೆ. ನಾನೆನು ಮಾಡಲಿ ಎಂದು ಯಜಮಾನ್ರು ಹೇಳಿದಾಗ ನನಗು ಹೌದಲ್ಲವೆ.... ಇವರಿಗೆ ಯಾಕೆ ಇಷ್ಟೊಂದು ರಿಸ್ಕು ಇವರು ವೃತ್ತಿಯನ್ನು ಬಿಟ್ಟು ಬೇರೆ ಏನಾದರು ಮಾಡಬಹುದಲ್ವ ಅನ್ನಿಸಿ ಯಜಮಾನ್ರ ಬಳಿ ಅವರೊಟ್ಟಿಗೆ ಒಮ್ಮೆ ಮಾತಡಬೇಕಲ್ಲ ಅಂದಾಗ ಅದಕ್ಕೇನಂತೆ ಮಾತಾಡುವಂತೆ ಬಿಡುವು ಮಾಡಿಕೊಂಡು ಬಾ.... ಅಂದಿದ್ದರು ಸರಿ ಯಾವ್ಯಾವುದೋ ಒತ್ತಡಗಳ ಮಧ್ಯೆ ಅವರನ್ನು ಭೇಟಿಮಾಡಲು ಸಾಧ್ಯವಾಗಲಿಲ್ಲ. ಇದಾದ ಕೆಲವು ದಿನಗಳ  ನಂತರ ನನ್ನ ಎನ್.ಜಿ.ಓ ಸ್ನೇಹಿತರೊಬ್ಬರು ಕರೆ ಮಾಡಿ ಒಂದು ಕಾರ್ಯಕ್ರಮವಿದೆ. ನೀವು ಖಂಡಿತಾ ಬರಬೇಕು ಅಂದರು. ನಾನು ಏನಾದರು ಸಬೂಬು ಹೇಳಿ ತಪ್ಪಿಸಿಕೊಂಡು ಬಿಡುವ ಎಂದುಕೊಳ್ಳುತ್ತಿರುವಾಗಲೇ ನೀವು ತುಂಬಾ ದಿನಗಳಿಂದ ಭೇಟಿ ಮಾಡಬೇಕು ಅಂದುಕೊಂಡಿದ್ದರಲ್ಲ, commaricial Sex workers ಅವರದೇ ಒಂದು ಸಂಘ ಇದೆ. ಅವರೇ ಅವರ ಸಮಸ್ಯೆಗಳ ಕುರಿತ, ಪೋಲಿಸ್ ದೌರ್ಜನ್ಯಗಳ ಕುರಿತು, ಅವರ ಅನುಭವಗಳನ್ನು ನೇರವಾಗಿ ಕೇಳುವ ಅವಕಾಶವಿದೆ ಬನ್ನಿ ಎಂದರು. ಮಾರನೆ ದಿನ ತಡಮಾಡದೆ ಸಿಟಿ ಮಾರ್ಕೆಟ್ ಬಸ್ ಹತ್ತಿ ಅಲ್ಲಿಗೆ ತಲುಪಿದಾಗ ಕಾರ್ಯಕ್ರಮ ಪ್ರಾರಂಭವಾಗಿಬಿಟ್ಟಿತ್ತು. ಕಾರ್ಯಕ್ರಮದ ವೇದಿಕೆಯ ಮೇಲೆ ದಲಿತ ಸಂಘರ್ಷ ಸಮಿತಿಯ ದಲಿನಾಯಕರು, ಮಾನವ ಹಕ್ಕುಗಳ ಹೋರಾಟಗಾರರು ಮತ್ತು ಸೆಕ್ಸ್ ವರ್ಕರ್ಸ್ಗೆ ಉಚಿತ ಕಾನೂನು ಸಹಾಯ ಮಾಡುವ ವಕೀಲರು ಬಂದಿದ್ದಾರೆ. ಕಾರ್ಯಕ್ರಮದಲ್ಲಿ ಸಮಾರು ಇನ್ನೂರ ಐವತ್ತಕ್ಕೂ ಹೆಚ್ಚು ಸೇವಕಿಯರು ಪಾಲ್ಗೊಂಡು ಸರದಿಯ ಪ್ರಕಾರ ಕೆಲವರು ವೇದಿಕೆಯ ಮೇಲೆ ತಮ್ಮ ವೈಯಕ್ತಿಕ ನೋವುಗಳನ್ನು, ತಮ್ಮ ಮೇಲಾದ ದೌರ್ಜನ್ಯಗಳನ್ನು, ತಾವು ಕೂಪಕ್ಕೆ ಬರಲು ಕಾರಣವೇನು ಮುಂತಾದ ತಮ್ಮ ಬದುಕಿನ ಚಿತ್ರಣಗಳನ್ನೆಲ್ಲ ತೆರೆದಿಡುತ್ತಿದ್ದಾರೆ. ಕೆಲವರು ಮಾತಾಡುವಾಗ ಗದ್ಗದಿತರಾಗಿ ಮಾತನಾಡಲಾಗದೆ ಅಳುತ್ತಾರೆ. ಅಲ್ಲಿರುವ ಎಲ್ಲ ಸೇವಕಿಯರು ಕೆಲಸಕ್ಕೆ ಇಷ್ಟಪಟ್ಟೇನು ಬಂದವರಲ್ಲ ಯಾವ್ಯಾವುದೋ ದುರಂತಗಳ ಮಧ್ಯೆ ಆಕಸ್ಮಿಕವಾಗಿ ವೃತ್ತಿಗೆ ಬಂದವರೆ. ಆದರೆ ಇಂದು ಅದೇ ವೃತ್ತಿಯನ್ನು ಅನಿವಾರ್ಯವಾಗಿ ಇಷ್ಟಪಟ್ಟು ಮಾಡಬೇಕಾಗಿದೆ ಎಂಬ ಅವರ ಮಾತುಗಳು ಎಂತವರನ್ನು ಮುಟ್ಟುತ್ತವೆ.
ಅಲ್ಲಿ ಸೇರಿರುವವರು ತೊಂಬತ್ತು ಭಾಗ ಅನಕ್ಷರಸ್ಥರು ಮತ್ತು ಸ್ಲಂಗಳಲ್ಲಿ ಬದುಕುವವರೆ ಅದರಲ್ಲೂ ಹೆಚ್ಚು ಕೆಳಜಾತಿಗೆ ಸೇರಿದವರು. ಗುಂಪಿನಲ್ಲಿ ಅಲ್ಪ ಸ್ವಲ್ಪ ಓದಿದವರು ಇದ್ದಾರೆ. ಓದು ತಿಳಿದಿರುವ ಸೇವಕಿರಯರು ಕಾರ್ಯಕ್ರಮ ನಿರೂಪಿಸುವುದು ಹಾಡುವುದು ಮುಂತಾದ ಕೆಲಸಗಳನ್ನು ಮಾಡುತ್ತಿದ್ದಾರೆ. ಮಿಕ್ಕವರೆಲ್ಲ ವೇದಿಕೆಯ ಮೇಲೆ ಹೇಳುತ್ತಿರುವವರ ಎಲ್ಲ ನೋವುಗಳು ನಮ್ಮ ನೋವುಗಳೇ ಎಂದುಕೊಳ್ಳುತ್ತಾ ತಮ್ಮ ಸೆರಗಿನಲ್ಲಿ ಕಣ್ಣೊರಿಸಿಕೊಳ್ಳುತ್ತಾ ಮೌನವಾಗಿ ಕೂತಿದ್ದಾರೆ.ಅವರಲ್ಲಿ ನನ್ನ ಎಡಭಾಗದಲ್ಲಿ ಕೂತಿದ್ದ ಸೇವಕಿಯ ಗುಂಪಿನಲ್ಲಿ ನನ್ನ ಪಕ್ಕದಲ್ಲೇ ಕೂತಿರುವ ಒಬ್ಬ ಸೇವಕಿಯ ಮುಖ ಅರ್ಧಸುಟ್ಟು ಹೋಗಿದೆ. ಒಂದು ಕಣ್ಣು ಇಲ್ಲ. ಗಾಯದ ಗುರುತನ್ನು ನೋಡಿದರೇನೆ ಹೇಳಬಹುದು. ಅದು ಆ್ಯಸಿಡ್ನಿಂದ ಸುಟ್ಟ ಗಾಯವೆಂದು; ಆಕೆಯ ಮುಖ ಸುಟ್ಟುಹೋಗಲು ಕಾರಣವೇನೆಂದು ಕೇಳೋಣ ಅನ್ನುವಷ್ಟರಲ್ಲಿ ಅಡ್ವಕೇಟ್ ಮೇಡಂ ಮಾತನಾಡುಲು ಶುರುಮಾಡಿದರು. ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ ಪುರುಷರು. ಅದರಲ್ಲೂ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ನಿಮ್ಮ ಬಳಿಗೆ ಬಂದವರನ್ನು ಎಂದಾದರೂ ನನ್ನನ್ನು ಹೆಂಡತಿಯನ್ನಾಗಿ ಸ್ವೀಕರಿಸು ಎಂದು ಕೇಳೀದ್ದೀರಾ ? ಇಲ್ಲಾತಾನೆ... ಭೋಗಿಸಲು ಮಾತ್ರ ಬೇಕಿರುವ ನಿಮ್ಮನ್ನು ಅನಂತರ ನೋಡುವ ದೃಷ್ಟಿ ಮಾತ್ರ ಯಾಕೆ ಕೆಟ್ಟದ್ದು ಸೂಳೆಯರು, ಬೀದಿಹೋಕ ಹೆಂಡಿರು ಎಂದೇಕೆ ಕರೆಯುತ್ತಾರೆ ಎಂದಾಗ ಎಲ್ಲರು ಮೌನ......! ವ್ಯವಸ್ಥೆಯ ಕುರುಡುತನವನ್ನು, ಕ್ರೂರತನವನ್ನು ಆರ್ಥ ಮಾಡಿಕೊಳ್ಳಬೇಕು. ಎಂದು ಕಾನೂನಿನ ವೈಪಲ್ಯತೆಗಳ ಕುರಿತು ಅವರು ಮಾತನಾಡಿದರು.
ಇತ್ತೀಚೆಗೆ ಅದೇ ಸೇವಕಿಯನ್ನು (ಕಣ್ಣು, ಮುಖ ಸುಟ್ಟಿಹೋಗಿರುವ) ಸೇವಕಿಯನ್ನು ಸಿಟಿ ಮಾರ್ಕೆಟ್ಟಿನಲ್ಲಿ ಬಿರ್ಜ್ ಕೆಳಗೆ ಅವರ ಇಬ್ಬರು ಮೂವರು ಸಹುದ್ಯೋಗಿಗಳೊಂದಿಗೆ, ಊಟ ಮಾಡುತ್ತಿದ್ದುದು ನೋಡಿದೆ. ಆಕೆಯನ್ನು ಅವರ ಗೆಳತಿಯರನ್ನು ನೋಡಿದಾಕ್ಷಣ ಮನಸ್ಸು ಏನನ್ನೋ ಯೋಚಿಸುತ್ತಿದೆ. ಎಂಥಾ ಕಷ್ಟದ ಸಮಯದಲ್ಲೂ ಹಂಚಿಕೊಂಡು ತಿನ್ನುತ್ತಾರೆ. ಬೀದಿಯಲ್ಲಿ ಸಿಕ್ಕ ಯ್ಯಾರ್ಯಾರದೋ ಮಕ್ಕಳಿಗೆ, ತಾಯಂದಿರಾಗುತ್ತಾರೆ.ಯಾವ ಜಾತಿ, ಧರ್ಮಗಳು ಇಲ್ಲದೆ ಸಮಾಜ ತಿರಸ್ಕರಿಸಿದ ಜನರನ್ನು ಬಂಧುಗಳೆಂದು ಭಾವಿಸಿ ಬದುಕುತ್ತಾರೆ. ಇಂಥ ವಿಶಾಲ ಹೃದಯವಿರುವ ಇವರನ್ನೇಕೆ ಸಮಾಜ ಓರೆಗಣ್ಣಿನಿಂದ ನೋಡುತ್ತೆ, ಹೊರಗಿಟ್ಟಿದೆ ಅನ್ನುವ ಎಷ್ಟೋ ಪ್ರಶ್ನೆಗಳ ಮಧ್ಯೆ ಅಂದು ರಾತ್ರಿ ನನ್ನ ಮಾತನಾಡಿಸಿದ ಆಕೆ ಗುಂಪಿನವರಲ್ಲೇ ಯಾರೋ ಒಬ್ಬರು ಇರಬಹುದಲ್ಲವೆ ಅನ್ನಿಸಿತು. ಆದರೆ ಆಕೆ ಹೀಗ ಎಲ್ಲಿದ್ದಾಳೋ.....ಯಾರ ಸುಖಕ್ಕಾಗಿ ಯಾವ ರಸ್ತೆಯ ಬದಿ ನಿಂತಿದ್ದಾಳೋ..... ಹೇಳುವವರುಯಾರು.?


ಗೋವಿಂದರಾಜ ಬೈಚಗುಪ್ಪೆ... ಬರೆಯುತ್ತಾರೆ, "ಝೆನ್ ಗುರುವಿನಂತೆ ಬದುಕಿದ ಗೋನಾಳ್ ಸರ್"

ಝೆನ್ ಗುರು ಎಷುನ್ನಾ ಕುಳಿತಿದ್ದಾಳೆ. ಅವರಲ್ಲಿಗೆ ಒಬ್ಬ ಯುವಕ ಶಿಷ್ಯತ್ವ ಸ್ವೀಕರಿಸಲು ಬರುತ್ತಾನೆ. ಆಶ್ರಮದಲ್ಲಿ ಊಟ ಮಾಡಿ ಗುರುವಿನ ಬಳಿ ಬಂದು ತಾನು ಬಂದ ಉದ್ದೇಶವನ...